ಪರಪಂಚ ಮಾತಿನ ಭಾಗ ಪೂರ್ಣ

  • IndiaGlitz, [Wednesday,May 21 2014]

ಪ್ರಪಂಚವೆ ದೇವರು ಮಾಡಿರೋ ಬಾರು! ಹೀಗನ್ನುತದೆ ಕನ್ನಡ ಸಿನೆಮಾ ಎದ್ದೇಳು ಮಂಜುನಾಥ ಚಿತ್ರದ ಹಾಡು. ಆ ಬಾರ್ ಅಲ್ಲೇ ಬಹುತೇಕ ಚಿತ್ರೀಕರಣ ಅಂತ ಏನಿಲ್ಲ ಈ ‘ಪರಪಂಚ’ ಚಿತ್ರಕ್ಕೆ. ಆದರೆ ನಾಯಕ ಹಾಗೂ ನಾಯಕಿ ಇಬ್ಬರು ಬಾರ್ ಅಲ್ಲಿ ಉದ್ಯೋಗಿಗಳು. ಈ ಬಾರ್ ಅಲ್ಲೇ ಎಲ್ಲ ಸತ್ಯ ತಿಳಿದು ಕೌನ್ಸಿಲ್ಲಿಂಗ್ ಸಹ ಆಗುವುದು.

ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಪರಪಂಚ ‘ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಸಹ ಮುಗಿದಿದೆ. ಒಂದು ಹಾಡು ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಬಾಕಿಯಿದೆ. ನಾಯಕ ಯೋಗೀಶ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಜಯಮ್ಮನ ಮಗ ‘ಚಿತ್ರದ ನಿರ್ದೇಶಕ ವಿಕಾಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಹಲವು ವರ್ಷಗಳಿಂದ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ‘ಗಾಂಧಿಸ್ಮೈಲ್ ‘ಚಿತ್ರದ ನಿರ್ದೇಶಕರೂ ಆಗಿರುವ ಕ್ರಿಶ್ಜೋಶಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ‘ಪರಪಂಚ ‘ಕ್ಕೆ ವೆಜ್ ಎಂಡ್ ನಾನ್ವೆಜ್ ಎಂಬ ಅಡಿಬರಹವಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ನಾಲ್ಕು ಹಾಡುಗಳನ್ನು ಯೋಗರಾಜ್ಭಟ್ ಹಾಗೂ ಒಂದು ಹಾಡನ್ನು ಜಯಂತಕಾಯ್ಕಿಣಿ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ ‘ಪರಪಂಚ‘ ಕ್ಕಿದೆ. ಡಾ:ರವಿರಾಜ್ ಹಾಗೂ ರುದ್ರಪ್ಪ ಈ ಚಿತ್ರದ ಸಹ ನಿರ್ಮಾಪಕರು.

ದಿಗಂತ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಾಗಿಣಿ. ಯೋಗರಾಜ್ಭಟ್, ದತ್ತಣ್ಣ, ಕೆ.ಎಸ್.ಎಲ್.ಸ್ವಾಮಿ, ಅನಂತನಾಗ್, ವಿ.ಮನೋಹರ್, ವಿಕಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.